ಶಿರಸಿ: 2025-26 ನೇ ಸಾಲಿನ ಶಿರಸಿ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನವಾಗುವ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಡಿ ಈ ಕೆಳಗಿನ ಕಾರ್ಯಕ್ರಮದ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು. 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಘಟಕ ವೆಚ್ಚ ಮತ್ತು ಸಹಾಯಧನದ ಮಿತಿಯನ್ನು ಪರಿಷ್ಕರಿಸಿದ್ದು ರೈತರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ. ವಿವಿಧ ತೋಟಗಾರಿಕೆ ಬೆಳೆಗಳಾದ ಅನಾನಸ್, ಅಂಗಾಂಶ ಬಾಳೆ, ಕಾಳುಮೆಣಸು, ದಾಲ್ಚಿನಿ, ಬೆಣ್ಣೆಹಣ್ಣು, ಹಲಸು, ಕೋಕಂ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಶೇ.40 ರ ಸಹಾಯಧನದಂತೆ ಪ್ರತಿ ಫಲಾನುಭವಿಗೆ ಕನಿಷ್ಟ ಅರ್ಧ ಎಕರೆಯಿಂದ ಗರಿಷ್ಠ ಐದು ಎಕರೆವರೆಗೆ ಸಹಾಯಧನ ಪಡೆಯಲು ಅವಕಾಶ ನೀಡಲಾಗಿದೆ. ಮೇಲಿನ ಎಲ್ಲಾ ಬೆಳೆಗಳಿಗೂ ಒಂದು ವರ್ಷದ ನಿರ್ವಹಣೆಗೆ ಸಹ ಸಹಾಯಧನ ನೀಡಲಾಗುವುದು. ಹೈಬ್ರೀಡ್ ತರಕಾರಿಗಳನ್ನು ಬೆಳೆಯಲು ಶೇ.50ರ ಸಹಾಯಧನ ಲಭ್ಯವಿದ್ದು ಪ್ರತಿ ಫಲಾನುಭವಿಗೆ ಗರಿಷ್ಠ 5 ಎಕರೆವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಸಮಗ್ರ ರೋಗ ಮತ್ತು ಕೀಟ ನಿಯಂತ್ರಣ ಕಾರ್ಯಕ್ರಮದಡಿ ರೈತರು ಖರೀದಿಸಿದ ಮೈಲುತುತ್ತ ಹಾಗೂ ಇತರ ರೋಗ ಮತ್ತ ಕೀಟ ನಿಯಂತ್ರಣಗಳ ಖರೀದಿಗೆ ಶೇ.30ರಂತೆ ಎಕರೆಗೆ ರೂ.1500/- ಗಳ ಸಹಾಯಧನದಂತೆ ಗರಿಷ್ಠ 5 ಎಕರೆವರೆಗೆ ಸಹಾಯಧನ ನೀಡಲಾಗುವುದು. ಪ್ಲಾಸ್ಟಿಕ್ ಹೊದಿಕೆ ಮತ್ತು ಕಳೆ ಚಾಪೆ (ವೀಡ್ ಮ್ಯಾಟ್) ಕಾರ್ಯಕ್ರಮಕ್ಕೆ ಶೇ.50ರ ಸಹಾಯಧನ ಲಭ್ಯವಿರುತ್ತದೆ. ಕಾಳುಮೆಣಸು ಪುನಶ್ಚೇತನಕ್ಕೆ ಶೇ50 ರ ಸಹಾಯಧನ ಲಭ್ಯವಿರುತ್ತದೆ. ಜೇನು ಪೆಟ್ಟಿಗೆ ಮತ್ತು ಕುಟುಂಬ ಖರೀದಿಗೆ ಶೇ.40ರ ಸಹಾಯಧನದಂತೆ ಪ್ರತಿ ಜೇನು ಪೆಟ್ಟಿಗೆ ಮತ್ತು ಕುಟುಂಬದ ಒಂದು ಘಟಕಕ್ಕೆ ರೂ.1600/-ಗಳ ಸಹಾಯಧನ ನೀಡಲಾಗುವುದು. ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಾದ ಸಣ್ಣ ಪ್ರಮಾಣದ ಅಣಬೆ ಬೇಸಾಯ ಘಟಕಕ್ಕೆ, ನೀರು ಸಂಗ್ರಹಣಾ ಘಟಕಕ್ಕೆ ಶೇ50ರ ಸಹಾಯಧನ ನೀಡಲಾಗುವುದು. ಮಿನಿಟ್ರಾಕ್ಟರ್ ಖರಿದೀಗೆ ಶೇ.40ರ ಸಹಾಯಧನ ಮತ್ತು ತೋಟಗಾರಿಕೆ ಬೆಳೆಗಳನ್ನು ಸಂಸ್ಕರಿಸಲು ಪ್ರಾಥಮಿಕ ಸಂಸ್ಕರಣಾ ಘಟಕ ನಿರ್ಮಿಸಲು ಅವಕಾಶವಿದ್ದು ಶೇ.35ರ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ದಿನಾಂಕ:18-06-2025 ರೊಳಗೆ ಶಿರಸಿ ತೋಟಗಾರಿಕೆ ಕಛೇರಿಯಲ್ಲಿ ಹೆಸರು ನೊಂದಾಯಿಸಿ ಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಶಿರಸಿ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ತೋಟಗಾರಿಕಾ ಇಲಾಖೆಯಿಂದ ಸಹಾಯಧನ ವಿತರಣೆ: ರೈತರಿಂದ ಅರ್ಜಿ ಆಹ್ವಾನ
